ಲೈಂಗಿಕ ದೌರ್ಜನ್ಯ - ಅಸಹಾಯಕರ ಆತ್ಮನಾಶ
ನಾಲ್ಕಾರು ವರ್ಷಗಳ ಕೆಳಗೆ ಮೇಲಧಿಕಾರಿಗಳ ಲೈಂಗಿಕ ದೌರ್ಜನ್ಯವನ್ನು ದಿಟ್ಟವಾಗಿ ವಿರೋಧಿಸಿ ನಿಂತು, ಕೊನೆಗೆ ನ್ಯಾಯ ಸಿಗಲಿಲ್ಲವೆಂದು ಹೈಕೋರ್ಟ್ ಮೆಟ್ಟಿಲೇರಿದ್ದ ಭಾರತೀಯ ವಾಯುಸೇನೆಯ ಫ್ಲೈಯಿಂಗ್ ಆಫೀಸರ್ ಅಂಜಲಿ ಗುಪ್ತಾ, ಸೆಪ್ಟೆಂಬರ್ ೧೧ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೋರ್ಟ್ ಮಾರ್ಷಲ್ನಲ್ಲಿ ನ್ಯಾಯ ಸಿಗದಿದ್ದರೂ ಎದೆಗುಂದದೆ ಹೈಕೋರ್ಟಿಗೆ ಹೋಗಿದ್ದ ಆಕೆ, ಜೀವನದ ಟ್ರಯಲ್ನಲ್ಲಿ ಸೋಲೊಪ್ಪಿಕೊಂಡು ಪ್ರಾಣ ಒಪ್ಪಿಸಿರುವುದು ದುರಂತವೇ ಸರಿ. ನೇಣು ಕುಣಿಕೆಗೆ ಕೊರಳೊಪ್ಪಿಸಿದ ಅಂಜಲಿಯ ನೋವು-ಅವಮಾನದ, ಸೋಲು-ಖಿನ್ನತೆಯ ಕತೆ ಅನ್ಯಾಯದ ವಿರುದ್ಧ ದನಿಯೆತ್ತುವವರನ್ನು ಕಂಗೆಡಿಸುವಂತಿದೆ. ಮಹಿಳೆಯರ ಕುರಿತ ಸಶಸ್ತ್ರ ಪಡೆಗಳ ಧೋರಣೆ, ಲಿಂಗ ಅಸಮಾನತೆ, ಉದ್ಯೋಗ ಸ್ಥಳದಲ್ಲಿ ಮಹಿಳಾ ಸುರಕ್ಷೆ ಮುಂತಾದ ವಿಷಯಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಸಶಸ್ತ್ರ ಪಡೆಗಳು ಪುರುಷ ಪ್ರಾಬಲ್ಯ ಹೊಂದಿದ್ದು ಅಲ್ಲಿ ಮಹಿಳೆಯರ ಸಂಖ್ಯೆ ತುಂಬ ಕಡಿಮೆ. ಇರುವವರು ವೈದ್ಯಕೀಯ, ನರ್ಸಿಂಗ್, ಲೆಕ್ಕಪತ್ರ ವಿಭಾಗದಂತಹ ಕಡಿಮೆ ಅಪಾಯಕಾರಿ ಉದ್ಯೋಗಗಳಲ್ಲಿದ್ದಾರೆ. ಭಾರತೀಯ ವಾಯು ಸೇನೆಯಲ್ಲಿ ಕೈ ಬೆರಳೆಣಿಕೆಯಷ್ಟು ಫ್ಲೈಯಿಂಗ್ ಆಫೀಸರ್ಸ್ ಇದ್ದಾರೆ. ವಾಯುಸೇನೆ ಸೇರಲು ಧೈರ್ಯ, ಸಮಯ ಪ್ರಜ್ಞೆ, ಛಲ, ಜಾಣ್ಮೆ ಎಲ್ಲವೂ ಬೇಕಾಗುತ್ತದೆ. ಅವೆಲ್ಲ ಮೇಳವಿಸಿದ್ದ ಬಿಚ್ಚು ಮಾತಿನ ನೇರ ನುಡಿಯ ಅಂಜಲಿ ಫ್ಲೈಯಿಂಗ್ ಆಫೀಸರ್ ಆದಾಗ ಸಾವಿರ ಕನಸು ಹೊತ್ತು ವಿಹರಿಸಿರಬಹುದು. ಆದರೆ ಅವೆಲ್ಲವೂ ಅಷ್ಟು ಬೇಗ ನೆಲಕಚ್ಚಲು ಯಾವುದು ಕಾರಣವಾಯಿತು? ಮೇಲಧಿಕಾರಿಗಳಿಗೆ ಅತಿ ವಿನಯ ಪ್ರದರ್ಶಿಸದ, ಹೊಂದಿಕೊಳ್ಳಲಾರದ ಅಂಜಲಿ ವ್ಯಗ್ರಗೊಳ್ಳುತ್ತ ಹೋದಳೆ? ಅವರ ವರ್ತನೆಗಳ ಕುರಿತು ಅತಿಸೂಕ್ಷ್ಮವಾದಳೆ? ವ್ಯವಸ್ಥೆಯ ಬಗೆಗೆ ತಾಳ್ಮೆ ಕಳೆದುಕೊಂಡಳೆ? ಯಾವ ಕಾರಣವೋ ಅಂತೂ ಸಶಸ್ತ್ರ ಪಡೆಯ ಶ್ರೇಣೀಕೃತ ವ್ಯವಸ್ಥೆಗೆ ಜೀವವೊಂದು ಬಲಿಯಾದ ಸ್ಪಷ್ಟ ಕುರುಹುಗಳು ಈ ಕೇಸಿನಲ್ಲಿ ಅಡಗಿವೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ತಾನು ಕೆಲಸ ಮಾಡುವ ವಿಭಾಗದ ಮೂವರು ಮೇಲಧಿಕಾರಿಗಳು ಲೈಂಗಿಕ ಕಿರುಕುಳ ನೀಡಿದರೆಂದು ವಿಮಾನಪುರ ಪೋಲೀಸ್ ಠಾಣೆಯಲ್ಲಿ ಅಂಜಲಿ ದೂರು ನೀಡಿದ್ದಳು. ಇಲಾಖೆಯ ವಿಚಾರಣೆಗಾಗಿ ಕೋರ್ಟ್ ಮಾರ್ಷಲ್ ಎದುರು ಹಾಜರಾಗಬೇಕಾಯಿತು. ಜನರಲ್ ಕೋರ್ಟ್ ಮಾರ್ಷಲ್ ಎದುರಿಸಿದ ಮೊಟ್ಟಮೊದಲ ಮಹಿಳಾ ಆಫೀಸರ್ ಆಕೆ. ೨೦೦೪ರ ಏಪ್ರಿಲ್ನಲ್ಲಿ ಶುರುವಾಗಿ ೨೦೦೬ರ ಫೆಬ್ರುವರಿಯ ತನಕ ಕೋರ್ಟ್ ಮಾರ್ಷಲ್ ಇತಿಹಾಸದಲ್ಲೇ ಅತಿ ದೀರ್ಘಕಾಲ ವಿಚಾರಣೆ ನಡೆಯಿತು. ಮೇಲಧಿಕಾರಿಗಳ ಮೇಲಿನ ಆರೋಪ ಸಾಬೀತುಪಡಿಸಲು ಸಾಧ್ಯವಾಗಲಿಲ್ಲವೆಂದು ಕೋರ್ಟ್ ಆ ಮೂವರನ್ನು ದೋಷಮುಕ್ತರನ್ನಾಗಿಸಿತು. ಕೇಸಿನ ಪೂರಾ ಭಾರ ಅಂಜಲಿಯ ಮೇಲೆ ಬಿದ್ದು ಆಕೆಗೆ ಅಶಿಸ್ತಿನ ವರ್ತನೆ; ಹಣ ದುರುಪಯೋಗ; ಮೇಲಧಿಕಾರಿಯ ತಿಂಡಿ ಡಬ್ಬಿಯನ್ನು ನೆಲಕ್ಕೆ ಬಿಸಾಕಿ ಅಸಭ್ಯ ವರ್ತನೆಯಿಂದ ಅವಿಧೇಯತೆ ತೋರಿದ್ದು; ಕರ್ತವ್ಯಕ್ಕೆ ಹಾಜರಾಗದೇ ಇರುವುದು; ತರಬೇತಿಗೆ ಹಾಜರಾಗದೇ ಇರುವುದು - ಹೀಗೆ ಐದು ಕಾರಣ ಕೊಟ್ಟು ಕೆಲಸದಿಂದ ವಜಾ ಮಾಡುವಂತೆ ಸಲಹೆ ನೀಡಲಾಯಿತು. ಬರೀ ವಜಾ ಅಷ್ಟೇ ಅಲ್ಲ, ಯಾವುದೇ ಗೌರವವಿಲ್ಲದೇ ರ್ಯಾಂಕ್ಗಳನ್ನು ಕಿತ್ತುಕೊಂಡು ಖಾಲಿ ಕೈಯಲ್ಲಿ ಮನೆಗೆ ಕಳಿಸುವಂತೆ ಸಲಹೆ ಕೊಟ್ಟಿತು. ಆಗ ಏರ್ ಚೀಫ್ ಮಾರ್ಷಲ್ ಆಗಿದ್ದ ಎಸ್.ಪಿ.ತ್ಯಾಗಿ ಅವರ ದಯೆಯಿಂದ ಛೀಮಾರಿಯಿಲ್ಲದೆ ಕೆಲಸದಿಂದ ಕಿತ್ತು ಹಾಕುವಷ್ಟರಮಟ್ಟಿಗೆ ಶಿಕ್ಷೆ ಕಡಿತಗೊಂಡು ಅಂಜಲಿಯ ವಾಯುಸೇನೆಯ ಸೇವೆ ಕೊನೆಗೊಂಡಿತು.
ಕೆಲಸದಿಂದ ವಜಾ ಮಾಡಲು ವಾಯುಸೇನೆ ಕೊಟ್ಟ ಕಾರಣಗಳು ಎಷ್ಟು ಬಾಲಿಶವಾಗಿವೆಯೆಂದರೆ, ಅದು ಆಕೆಯನ್ನು ಬಲಿಪಶುವಾಗಿಸಲು ಮಾಡಿದ ಯತ್ನ ಎಂದು ಮೇಲ್ನೋಟಕ್ಕೇ ತಿಳಿಯುತ್ತದೆ. ಅವಳ ಮೇಲಿನ ಒಂದು ಆರೋಪ ಹಣದ ದುರ್ಬಳಕೆ. ಅದೇನು ಸಾವಿರಾರು ಕೋಟಿ ರೂಪಾಯಿಯ ದುರ್ಬಳಕೆಯಲ್ಲ. ಬೆಂಗಳೂರಿನಿಂದ ದೆಹಲಿಗೆ ಸರ್ವಿಸ್ ಏರ್ಕ್ರಾಫ್ಟ್ನಲ್ಲಿ ತೆರಳಿದ್ದಾಗ್ಯೂ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಭತ್ಯೆಯಾಗಿ ೧೦೮೦ ರೂ. ಕ್ಲೈಮ್ ಮಾಡಿದ್ದು ಅಂಜಲಿಯ ಆರ್ಥಿಕ ಅಪರಾಧವಾಗಿತ್ತು. ಸೇನಾಪಡೆಯ ಉನ್ನತ ಅಧಿಕಾರಿಗಳ ಭ್ರಷ್ಟಾಚಾರ ಸಾರ್ವಜನಿಕ ವಲಯದ ಅಧಿಕಾರಿಗಳಷ್ಟೇ ಮುಗಿಲು ಮುಟ್ಟುತ್ತಿರುವಾಗ ಒಂದು ಸಾವಿರ ರೂಪಾಯಿಗೆ ಅವಳ ಬದುಕು ಮೂರಾಬಟ್ಟೆಯಾಯಿತು. ಹೀಗೇ ಸುಳ್ಳು ಕ್ಲೈಮ್ಗಳಿಗೆ ವಜಾಗೊಳ್ಳುವುದಾದರೆ ಈ ದೇಶದ ೯೯% ನೌಕರರು ಕೆಲಸ ಕಳೆದುಕೊಳ್ಳುವುದು ಖಚಿತ.
ಯಾರ ವಿರುದ್ಧ ಹೋರಾಡಿದ್ದಳೋ ಆ ಮೂವರೂ ನಿಷ್ಕಳಂಕಿತರಾಗಿ ಸೇವೆಯಲ್ಲಿ ಮುಂದುವರೆದರು. ಯಾವುದೇ ಗೌರವ-ಧನವಿಲ್ಲದೇ, ಕೆಲಸವೂ ಇಲ್ಲದೇ, ಬೆಂಗಳೂರಿನಲ್ಲಿ ಖಾಸಗಿ ಕೆಲಸ ಮಾಡತೊಡಗಿದ ಆ ಯುವತಿಯ ಮನಸ್ಥಿತಿ ಹೇಗಿರಬಹುದು? ಕೋರ್ಟ್ ಮಾರ್ಷಲ್ನ ಆರಂಭದ ದಿನಗಳಲ್ಲಿ ಉದ್ವೇಗಗಕ್ಕೊಳಗಾಗಿ, ತಾಳ್ಮೆ ಕಳೆದುಕೊಂಡು ಕೂಗಾಡಿದ್ದ ಅಂಜಲಿ, ತೀರ್ಪು ಹೊರಬಿದ್ದ ನಂತರ ‘ನನ್ನ ಸಲುವಾಗಿ ಜನರಲ್ ಕೋರ್ಟ್ ಮಾರ್ಷಲ್ ತೆಗೆದುಕೊಂಡ ಶ್ರಮ ಹಾಗೂ ಪ್ರಯತ್ನಕ್ಕೆ ಆಭಾರಿಯಾಗಿದ್ದೇನೆ ಎಂದು ತಣ್ಣಗೆ ಹೇಳಿದ್ದಳು. ಮೂವರು ಮೇಲಧಿಕಾರಿಗಳನ್ನು ಕಳಂಕಿತಗೊಳಿಸಿ ಮನೆಗೆ ಕಳಿಸಲು ಇಚ್ಛಿಸದ ವಾಯುಸೇನೆ ತನಗೇ ದುರ್ವರ್ತನೆಯ ಹಣೆಪಟ್ಟಿ ಅಂಟಿಸಿ ಕಳಚಿಕೊಂಡಿದ್ದು ಆಕೆಗೆ ನುಂಗಲಾರದ ನೋವಾಗಿತ್ತು. ಈ ಕಾರಣಕ್ಕೇ ನ್ಯಾಯ ಕೇಳಿ ರಾಜ್ಯ ಹೈಕೋರ್ಟಿನ ಮೆಟ್ಟಿಲೇರಿದಳು.
ಕೋರ್ಟ್ಮಾರ್ಷಲ್ ತನಕ ಕೆಚ್ಚೆದೆಯಿಂದಲೇ ಮುನ್ನುಗ್ಗಿದರೂ ನಂತರ ಆಕೆ ಕುಸಿದುಹೋದಹಾಗಿದೆ. ಈ ವಿಚಾರದಲ್ಲಿ ಕುಟುಂಬದ ಸಹಕಾರ-ವಿರೋಧ ಎಷ್ಟರಮಟ್ಟಿಗೆ ದೊರೆಯಿತೋ ಗೊತ್ತಿಲ್ಲ. ಕೆಲವೊಮ್ಮೆ ಗಣ್ಯ ಸಿರಿವಂತ ಕುಟುಂಬಗಳು ಮರ್ಯಾದೆಗಂಜಿ ದೂರ ಉಳಿದು ಹೋರಾಡುವ ತಮ್ಮವರನ್ನು ಒಬ್ಬಂಟಿಯಾಗಿಸುತ್ತವೆ. ಬಹುಶಃ ವಿವಾಹಿತ ಆದರೆ ವಿಚ್ಛೇದಿತನಲ್ಲದ ಗ್ರೂಪ್ಕ್ಯಾಪ್ಟನ್ ಅಮಿತ್ ಗುಪ್ತಾ ಜೊತೆ ಸಂಬಂಧ ಶುರುವಾಗಿದ್ದು ಇಂತಹ ಘಳಿಗೆಯಲ್ಲೇ ಇರಬಹುದು. ಆತನ ಜೊತೆ ಅಂಜಲಿಗೆ ಲಿವ್ಇನ್ ಸಂಬಂಧ ಇತ್ತೆಂದು ಅವರ ಕುಟುಂಬ ಈಗ ಹೇಳುತ್ತಿದೆ. ಪತ್ನಿಯಿಂದ ದೂರವಿರುವ, ವಿಚ್ಛೇದಿತನಲ್ಲದ ವ್ಯಕ್ತಿಯ ಜೊತೆ ವಾಸಿಸುವುದು ಕುಟುಂಬದವರಿಗೆ ಇಷ್ಟವಿರಲಿಲ್ಲ. ಆತ ಮದುವೆಯಾಗುತ್ತೇನೆಂದು ಹೇಳುತ್ತಲೇ ಇದ್ದನಂತೆ. ಸೆ.ಏಳರ ರಾತ್ರಿ ಭೋಪಾಲಿನ ಅಮಿತ್ ಗುಪ್ತ ಮನೆಗೆ ಹೋದ ಅಂಜಲಿ, ಮರುದಿನ ಅಮಿತ್ ತಮ್ಮ ಮಗನ ಮದುವೆ ನಿಶ್ಚಿತಾರ್ಥಕ್ಕೆ ದೆಹಲಿಗೆ ಹೋಗುತ್ತಿದ್ದಂತೆಯೇ ಒಂಟಿಯಾದಳು. ಅಮಿತ್ ಹಿಂದಿರುಗಿ ಬರುವುದರಲ್ಲಿ ಮಾನಸಿಕ ಖಿನ್ನತೆಗೋ, ಮತ್ಯಾವ ಕಾರಣಕ್ಕೋ ನೇಣಿಗೆ ಕೊರಳೊಡ್ಡಿದಳು. ಆತ್ಮಹತ್ಯೆಗೆ ಪ್ರಚೋದಿಸಿದ ಕಾರಣಕ್ಕಾಗಿ ಅಮಿತ್ ಅವರ ಮೇಲೂ ದೂರು ದಾಖಲಾಗಿ ಈಗ ಆತ ಪೋಲೀಸ್ ಕಸ್ಟಡಿಯಲ್ಲಿದ್ದಾನೆ.
ಚೌಕಟ್ಟಿನಾಚೆಗೆ ದಾಟುವುದು ಇವತ್ತಿಗೂ ಕಷ್ಟವೇ. ಹಾಗೇನಾದರೂ ಆಚೆ ಹೋದರೆ ಬಜಾರಿ ಪಟ್ಟವೂ ತಪ್ಪುವುದಿಲ್ಲ. ಈ ಪ್ರಕರಣ ಏನು ಸಂದೇಶ ಕೊಡುತ್ತಿದೆ? ಎಷ್ಟೇ ವಿದ್ಯೆ, ಅಂತಸ್ತು, ನೌಕರಿ, ಅಧಿಕಾರ ಇರಲಿ - ಹೆಣ್ಣೆಂಬ ಕಾರಣಕ್ಕೆ ನಿಮಗೆ ಕಟ್ಟಳೆಗಳಿಂದ ರಿಯಾಯ್ತಿ ಇಲ್ಲ ಎಂದೆ? ರಾಜಸ್ಥಾನದ ಬಾಲ್ಯವಿವಾಹ ವಿರೋಧಿ ಆಂದೋಲನದಲ್ಲಿ ಕಾರ್ಯಕರ್ತೆಯಾಗಿ ಗ್ಯಾಂಗ್ ರೇಪ್ಗೆ ಒಳಗಾದ ಅನಕ್ಷರಸ್ಥೆ ಭನವಾರಿ ದೇವಿಯಿಂದ ಹಿಡಿದು, ಐಎಎಸ್ ಅಧಿಕಾರಿ ರೂಪನ್ ದೇವಲ್ ಬಜಾಜ್ವರೆಗೆ ಯಾರಿಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆ ಗ್ಯಾರಂಟಿಯಿಲ್ಲ ಎಂದ ಹಾಗಾಯಿತು. ಅಲ್ಲದೆ ಅನಾದಿ ಕಾಲದಿಂದಲೂ ಶೀಲಶಂಕೆ ಅಥವಾ ಶೀಲಹರಣವನ್ನು ಮಹಿಳೆಯ ಬಾಯಿ ಮುಚ್ಚಿಸುವ ಸಾಧನವಾಗಿ ಬಳಸಲಾಗಿದೆ. ಬಹುಪಾಲು ಬೈಗುಳಗಳು ಹೆಣ್ಣಿನ ಶೀಲ ನಿಂದಿಸುವವೇ ಆಗಿವೆ. ಗಂಡಸಿಗೆ ಬೈಯ್ಯಲು ಬಳಕೆಯಾಗುವ ಬೈಗುಳಗಳೂ ಶೀಲಗೆಟ್ಟ ಹೆಣ್ಣಿನ ಜೊತೆಗೆ ಸಂಬಂಧಿಸಿದವೇ ಆಗಿವೆ. ನಾಲ್ಕು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಹಿರಿಯ ಮಹಿಳಾ ರಾಜಕಾರಣಿಯೊಬ್ಬರು ಈ ಕುರಿತು ಸಭೆಯೊಂದರಲ್ಲಿ ಮಾರ್ಮಿಕವಾಗಿ ಮಾತನಾಡಿದರು. ತನ್ನ ಕಾಲಮೇಲೆ ನಿಲ್ಲಲು ಮಹಿಳೆಯೇನಾದರೂ ಯತ್ನಿಸಿದರೆ ಅವಳನ್ನು ತಗ್ಗಿಸಲು ಬಳಸುವ ಕೊನೆಯ ಅಸ್ತ್ರ ಶೀಲವೇ ಆಗಿದೆ. ಹಳ್ಳಿಹಳ್ಳಿಯಲ್ಲೂ ಚುನಾವಣಾ ಕಣಕ್ಕಿಳಿದಿರುವ ಮಹಿಳಾ ರಾಜಕಾರಣಿಗಳು ಇದನ್ನು ಅನುಭವಿಸುತ್ತಿದ್ದಾರೆ. ಕಾಸ್ಮೋಪಾಲಿಟನ್ ಆಗುತ್ತಿರುವ ಬೆಂಗಳೂರಿನಲ್ಲೂ ಕಾರು ನಡೆಸುವ ಮಹಿಳೆ ವೇಗದ ಚಲನೆಗೆ ತೊಂದರೆ ನೀಡಿದರೆ, ‘ಏಯ್ ಅಮ್ಮೋ, ಮನೇಲಿ ಅಡಿಗೆ ಮಾಡೋಗು. ಕಾರ್ ತಂದ್ಬುಟ್ಳು.. ಎಂದು ಹಿಂದಿನಿಂದ ಬಂದವರ ವ್ಯಂಗ್ಯ ಭರಿತ ಮೂದಲಿಕೆ ಕೇಳಬಹುದು.
ತಾಯಿಯೊಬ್ಬಳು ತನ್ನ ಗಂಡ ಬಿಟ್ಟ ಮಗಳನ್ನು ಪ್ರತಿಸಲ ನನ್ನಬಳಿ ಕರೆ ತಂದಾಗಲೂ, ಅವಳಿಗೆ ತುಂಬ ಸಿಟ್ಟು, ಬಿಪಿ ಹೆಚ್ಚಾಗಿದೆಯೆ ನೋಡಿ ಎಂದು ಹೇಳುತ್ತಿದ್ದಳು. ಅವಳ ಸಿಟ್ಟಿನ ಕಾರಣ ನನಗೆ ತಿಳಿದಿತ್ತು. ಬಿಸಿಯೂಟದ ಹೆಲ್ಪರ್ ಆಗಿದ್ದ ಆಕೆಗೆ ಸಹೋದ್ಯೋಗಿಯೊಬ್ಬರು ಅಶ್ಲೀಲ ಚಿತ್ರ ತೋರಿಸಿ, ಸನ್ನೆಗಳ ಮೂಲಕ ಅಸಭ್ಯ ವರ್ತನೆ ತೋರಿಸುತ್ತಾರೆಂದೂ, ಅದಕ್ಕೆ ಏನು ಮಾಡುವುದು ಎಂದು ಬಂದಾಗಲೆಲ್ಲ ಕೇಳುತ್ತಿದ್ದಳು. ‘ಹೊಂದಿಕೊಂಡು ಹೋಗಬೇಕು ಎನ್ನುವುದು ಅವಳಿಗೆ ಎಲ್ಲರೂ ಉಪದೇಶಿಸುತ್ತಿದ್ದ ರಾಜೀ ಮಂತ್ರವಾಗಿತ್ತು. ಗಂಡಬಿಟ್ಟವಳೆಂದರೆ ಎಲ್ಲರಿಗೂ ಸೇರಿದವಳು ಎಂಬಂತೆ ಆತ ವರ್ತಿಸುವಾಗ ಹೊಂದಿಕೊಳ್ಳುವುದೆಂದರೆ ಹೇಗೆ? ಆ ರೀತಿ ಹೊಂದಿಕೊಳ್ಳಲು ತನಗೆ ಆಗದು ಎಂದು ದಿಟ್ಟವಾಗಿ ಹೇಳಿದ ಅವಳು ಕೊನೆಗೂ ತನ್ನ ಹೋರಾಟದಲ್ಲಿ ಸದ್ಯಕ್ಕೆ ಜಯ ಪಡೆದಳು. ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿ ಕಿರುಕುಳ ಕೊಟ್ಟವರನ್ನು ವರ್ಗ ಮಾಡಿಸುವುದರಲ್ಲಿ ಸಫಲಳಾದಳು. ಇದು ಹಲವರಲ್ಲಿ ಧೈರ್ಯ ತುಂಬಿ, ಮತ್ತೆ ಕೆಲವರಲ್ಲಿ ಹೆದರಿಕೆ ಹುಟ್ಟಿಸಿರಲು ಸಾಕು.
ನಮ್ಮೂರಿನ ಬಡ, ಪ್ರಭಾವಿಯಲ್ಲದ, ಉದ್ಯೋಗ ಖಾತರಿಯಿಲ್ಲದ, ಅತಂತ್ರ ಬದುಕಿನ ಮಹಿಳೆಗೆ ಸಿಕ್ಕಷ್ಟು ನ್ಯಾಯವೂ ಅಂಜಲಿಗೆ ಸಿಗಲಿಲ್ಲ ಏಕೆ?
ಅಂಜಲಿ ಗುಪ್ತಾ ಪ್ರಕರಣವನ್ನು ಗಮನಿಸಿದರೆ ಕೆಲವು ಅಂಶಗಳು ಸ್ಪಷ್ಟವಾಗುತ್ತವೆ. ಸಶಸ್ತ್ರ ಪಡೆಗಳ ಶ್ರೇಣಿ ವ್ಯವಸ್ಥೆ ಎಷ್ಟು ಕಟ್ಟುನಿಟ್ಟು ಹಾಗೂ ಅಲಿಖಿತವೆಂದರೆ ಮೇಲಧಿಕಾರಿಗೆ ಗುಲಾಮನಾಗಿ ‘ಹೊಂದಿಕೊಂಡು ಹೋಗಬಲ್ಲಿರಾದರೆ ಪ್ರಮೋಷನ್ ಪಡೆಯುತ್ತ ಹೋದೀರಿ. ಅದೇ ಪ್ರಶ್ನಿಸುವ ಎದೆಗಾರಿಕೆ, ನಿಷ್ಠುರತೆ, ಧೈರ್ಯ ತೋರಿಸಿದಿರೋ ‘ಅವಿಧೇಯತೆಯ ಖೆಡ್ಡಾದೊಳಗೆ ಕೆಡವಲಾಗುತ್ತದೆ. ದೇಶ ಕಾಯುವ ಗುರುತರ ಹೊಣೆಹೊತ್ತ ಸಶಸ್ತ್ರ ಪಡೆಯ ಅಧಿಕಾರಿಗಳು ಹೆಣ್ಣಿನ ಮಾನ ಕಾಪಾಡದೇ ಹೋಗುವರೆ? ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸೈನಿಕರಿಗಿಂತ ಹೆಚ್ಚು ಜಾರ್ಜಿಯನ್ ಹಾಗೂ ವಿಕ್ಟೋರಿಯನ್ ಮೆಡಲುಗಳು ಭಾರತೀಯ ಸೈನಿಕರಿಗೆ ಬಂದಿದ್ದವು. ಅಷ್ಟು ಶೌರ್ಯ ಮೆರೆದವರೇ ಇಂದು ಭ್ರಷ್ಟಗೊಂಡು, ಸುಳ್ಳು ಎನ್ಕೌಂಟರ್ಗಳನ್ನು ಸೃಷ್ಟಿ ಮಾಡುತ್ತ, ತಮ್ಮ ನೆಂಟರಿಷ್ಟರನ್ನೇ ಆಯಕಟ್ಟಿನ ಜಾಗದಲ್ಲಿ ತೊಡಗಿಸುತ್ತ, ಕೋಮುವಾದಿ ಕಾರ್ಯಗಳಲ್ಲಿ ಗುಟ್ಟಾಗಿ ತೊಡಗಿಕೊಂಡಿರುವುದನ್ನು ನೋಡಿದರೆ ಸೇನೆಯ ಬಗೆಗಿನ ಗೌರವದ ದಿನಗಳು ಮರೆಯಾದವೆಂದೇ ತೋರುತ್ತದೆ. ದೇಶದ ರಕ್ಷಣೆಗಾಗಿ, ಆಂತರಿಕ ರಕ್ಷಣೆಗಾಗಿ ಇರುವ ಸೇನೆ-ಪೊಲೀಸ್ ವ್ಯವಸ್ಥೆಗಳು ಅದೇ ನೆಲದ ದುರ್ಬಲರ ಶತ್ರುಗಳಾಗಿ ಪರಿಣಮಿಸುವ ವ್ಯಂಗ್ಯ ನಮ್ಮ ಮುಂದಿದೆ. ಸೇನೆ ನಾಗರಿಕರ ಮೇಲೆಸಗುವ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಮಣಿಪುರದ ಮಹಿಳೆಯರು ಬೆತ್ತಲೆ ಮೆರವಣಿಗೆ ಮಾಡಿದ್ದರು. ಇರೋಮ್ ಶರ್ಮಿಳಾ ಹತ್ತು ವರ್ಷಗಳಿಂದ ಉಪವಾಸ ಮಲಗಿದ್ದಾರೆ. ಆದರೆ ದೇಶ ಭದ್ರತೆ, ರಕ್ಷಣೆಯ ಹೆಸರಲ್ಲಿ ಅವ್ಯಾವುವೂ ಮಾನವ ಹಕ್ಕು ವ್ಯಾಪ್ತಿಯೊಳಗೂ ಬರದೇ ಮುಚ್ಚಿ ಹೋಗುತ್ತಿವೆ.
ಜಾಗತೀಕರಣದ ಸುಳಿಯಲ್ಲಿ ಹೆಣ್ಣು ‘ಉತ್ತಮ ಸರಕಿದು ಅತಿ ಲಾಭ ತರುವಂಥ ಎಂದು ದೇಹಮಾರಾಟದ ಧಂಧೆಯ ಬಲಿಪಶು ಆಗುತ್ತಿರುವಾಗಲೇ ಪ್ರತಿಷ್ಠಿತ ಉದ್ಯೋಗದಲ್ಲಿರುವವರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವುದು ಮಹಿಳಾ ಸಬಲೀಕರಣ ಪ್ರಯತ್ನಕ್ಕೆ ಒಳ್ಳೆಯ ಸುದ್ದಿ ಅಲ್ಲ.
*****
‘ಕೊಲೆಗಾರ ಬಲಿಪಶುವಿನ ದೇಹನಾಶ ಮಾಡಿದರೆ, ಲೈಂಗಿಕ ದೌರ್ಜನ್ಯ ಎಸಗುವವ ಅಸಹಾಯಕ ಮಹಿಳೆಯ ಆತ್ಮ ನಾಶ ಮಾಡುತ್ತಾನೆ.
- ಜಸ್ಟಿಸ್ ಅರಿಜಿತ್ ಪಸಾಯತ್
‘ದೌರ್ಜನ್ಯಕ್ಕೊಳಗಾದ ಮಹಿಳೆ ಅನುಭವಿಸುವುದು ಕೇವಲ ದೈಹಿಕ ಗಾಯವಷ್ಟೇ ಅಲ್ಲ, ಅದು ಆಳವಾದ, ಸಾವಿಲ್ಲದ, ಕಳಂಕಿತ ಭಾವನೆ. ಮಾನವ ಹಕ್ಕುಗಳಿಗೆ ನ್ಯಾಯಾಂಗದ ಪ್ರತಿಕ್ರಿಯೆಯು ಕಾನೂನಿನ ಕುರಿತ ಕುರುಡು ನಿಷ್ಠೆಯಿಂದ ಮೊಂಡಾಗಿ ಹೋಗಿದೆ.
- ಜಸ್ಟಿಸ್ ಕೃಷ್ಣ ಐಯ್ಯರ್
೧೯೯೧ರ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ೨೫ ನಿಮಿಷಕ್ಕೊಬ್ಬಳು ಮಹಿಳೆ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾಳೆ. ಇದು ದಾಖಲಾತಿ ಆಧರಿಸಿದ ವರದಿ. ಆದರೆ ನಿಜವಾಗಿ ನೋಡಿದರೆ ಪ್ರತಿ ನಿಮಿಷಕ್ಕೊಬ್ಬಳಾದರೂ ದೌರ್ಜನ್ಯಕ್ಕೊಳಗಾಗುತ್ತಿರಬಹುದು. ತಿಳುವಳಿಕೆಯ ಕೊರತೆ, ಕೌಟುಂಬಿಕ ಒತ್ತಡ, ಪೋಲೀಸರ ಅಸಹಕಾರ, ಭಯ ಹೀಗೇ ನಾನಾ ಕಾರಣಗಳಿಂದ ಮಾನಹಾನಿ ಕೇಸುಗಳು ಕೋರ್ಟು ಕಟ್ಟೆ ಹತ್ತುವುದೇ ಇಲ್ಲ. ಲೈಂಗಿಕ ದೌರ್ಜನ್ಯ ಕುರಿತಾದ ಕಾನೂನುಗಳು ಹಲವಿವೆ. ನಮ್ಮ ದೇಶದ ಬಹುಪಾಲು ಕಾನೂನುಗಳು ಶೋಷಿತರ ಪರವಾಗಿಯೇ ಇವೆ. ಕೆಲವು ಮೈಲಿಗಲ್ಲಾದ ಕೇಸುಗಳು-ತೀರ್ಪುಗಳು ಮಹಿಳಾ ಸಂಘಟನೆಗಳ ಹೋರಾಟದಿಂದ ಮುನ್ನೆಲೆಗೆ ಬಂದವು. ಎಷ್ಟೋ ನೀತಿ ನಿಯಮಾವಳಿಗಳನ್ನು ಕೇಸು ವಿಚಾರಣೆಯ ಸಮಯದಲ್ಲಿ ರೂಪಿಸಲಾಯಿತು.
ಅತ್ಯಾಚಾರವು ಹೆಣ್ಣಿನ ದೇಹದ ಮೇಲೆ ಮಾಡುವ ಆಕ್ರಮಣವಷ್ಟೇ ಅಲ್ಲ, ಮಾನಸಿಕವಾಗಿ ಅವಳ ಸಮಗ್ರತೆಯನ್ನು ನಾಶಮಾಡುವುದಾಗಿದೆ. ಲೈಂಗಿಕ ಕಿರುಕುಳವು ಉದ್ಯೋಗ ಸ್ಥಳದ ಸುರಕ್ಷತೆಯ ಕೊರತೆಯ ಜೊತೆಗೇ ಮಹಿಳೆಗೆ ದೈಹಿಕ ಪರಿಪೂರ್ಣತೆಯ ಹಕ್ಕಿನ ನಿರಾಕರಣೆಯೂ ಆಗಿದೆ. ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡೂ ದೈಹಿಕವಾಗಿ ದುರ್ಬಲಳಾದವಳ ಮೇಲೆ ಪುರುಷ ತನ್ನ ಶಕ್ತಿ ಪ್ರದರ್ಶನ ಮಾಡುವುದನ್ನು ಒಳಗೊಂಡಿದೆ. ಉದ್ಯೋಗ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಮುನ್ನೆಲೆಗೆ ಬಂದಿದ್ದು ‘ವಿಶಾಖ ಎಂಬ ಲಿಂಗಸಮಾನತೆಯ ಕುರಿತು ಕೆಲಸ ಮಾಡುವ ಸಂಘಟನೆಯು ರಾಜಸ್ಥಾನ ಸರ್ಕಾರದ ವಿರುದ್ಧ ಭನವಾರಿ ದೇವಿ ಕೇಸಿನಲ್ಲಿ ಕೋರ್ಟಿಗೆ ಹೋದಾಗ. ಅತ್ಯಾಚಾರದಂತಹ ಹೇಯ ಕೃತ್ಯಕ್ಕೊಳಗಾಗಿಯೂ ಬಲಶಾಲಿ ಆರೋಪಿಗಳ ಎದುರುನಿಂತು ಹೋರಾಡಿದ ಭನವಾರಿ ದೇವಿಯಂಥ ದಿಟ್ಟ ಮಹಿಳೆಯರು ಹೊರಜಗತ್ತಿನ ಕಣ್ಣು ತೆರೆಸಿದರು ಎನ್ನಬಹುದು.
ರಾಜಸ್ಥಾನ ಸರ್ಕಾರದ ಬಾಲ್ಯವಿವಾಹ ವಿರೋಧಿ ಆಂದೋಲನದ ಕಾರ್ಯಕರ್ತೆಯಾಗಿದ್ದ ಭನವಾರಿ ದೇವಿ ೧೯೯೨ರಲ್ಲಿ ಅವಳ ಗಂಡನ ಎದುರಿಗೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಳು. ಗ್ರಾಮದ ಬಲಶಾಲಿ ಮೇಲ್ಜಾತಿ ಮನೆಯೊಂದರಲ್ಲಿ ಅಕ್ಷಯ ತೃತೀಯಾ ದಿನದಂದು ನಡೆಯಬೇಕಿದ್ದ ೯ ತಿಂಗಳ ಹಸುಳೆಯ ಮದುವೆಯನ್ನು ನಿಲ್ಲಿಸುವಂತೆ ಸಂಬಂಧಪಟ್ಟ ಮೇಲಿನವರಿಗೆ ವರದಿ ಮಾಡಿದ್ದು ಅವಳ ಅಪರಾಧವಾಗಿತ್ತು. ತಮ್ಮ ಮನೆಯ ವಿಚಾರದಲ್ಲಿ ಕೈಹಾಕಿದ ಕೆಳಜಾತಿಯ ಹೆಣ್ಣುಮಗಳನ್ನು ಎಷ್ಟು ಮಾತ್ರಕ್ಕೂ ಸಹಿಸದ ಅವರು, ಮುಸ್ಸಂಜೆ ತನ್ನ ಬರಡು ಭೂಮಿಯಲ್ಲಿ ಗಂಡನ ಜೊತೆ ಕೆಲಸದಲ್ಲಿ ತೊಡಗಿದ್ದಾಗ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ಈ ಸುದ್ದಿಯನ್ನು ಭನವಾರಿ ಮೇಲಧಿಕಾರಿಗೆ ತಿಳಿಸಿದಾಗ ಅವರು ಪೊಲೀಸ್ ಸ್ಟೇಷನ್ಗೆ ಹೋಗುವಂತೆ ಹೇಳಿದರು. ಅಲ್ಲಿ ಸಾಕ್ಷಿಯಾಗಿ ‘ಲಂಗ ಬಿಚ್ಚಿಕೊಡಲು ಹೇಳಿದಾಗ ಗಂಡನ ಪೇಟವನ್ನು ಸೊಂಟಕ್ಕೆ ಸುತ್ತಿಕೊಂಡು ದಿನ ಕಳೆದಳು. ವೈದ್ಯಕೀಯ ಪರೀಕ್ಷೆಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿ ವೈದ್ಯೆಯರಿರಲಿಲ್ಲ. ಇದ್ದೊಬ್ಬ ವೈದ್ಯರು ಜೈಪುರದ ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿ ಚೀಟಿ ಕೊಟ್ಟರು. ಚೀಟಿಯಲ್ಲಿ ಆಕೆಯ ‘ವಯಸ್ಸು ನಿರ್ಧರಿಸಲು ಕೋರಲಾಗಿತ್ತು! ಜೈಪುರ ಆಸ್ಪತ್ರೆಯವರು ಮ್ಯಾಜಿಸ್ಟ್ರೇಟ್ ಆದೇಶ ಇಲ್ಲದೇ ತಪಾಸಣೆ ಮಾಡಲಾಗದು ಎಂದರು. ಮ್ಯಾಜಿಸ್ಟ್ರೇಟ್ ತನ್ನ ಕೆಲಸದ ಸಮಯ ಮುಗಿದಿದ್ದು, ಮರುದಿನ ಆದೇಶದ ಪ್ರತಿ ಕೊಡುವುದಾಗಿ ತಿಳಿಸಿ ಮನೆಗೆ ಹೋದರು. ಮರುದಿನ ಆದೇಶವೇನೋ ನೀಡಲಾಯಿತು, ಆದರೆ ಅದು ಸಾಮಾನ್ಯ ವೈದ್ಯಕೀಯ ತಪಾಸಣೆಗಾಗಿ ಮಾತ್ರ ಇತ್ತು. ಭಾರತೀಯ ಕಾನೂನು ಅತ್ಯಾಚಾರವಾದ ೨೪ ಗಂಟೆಗಳೊಳಗೆ ಗುಪ್ತಾಂಗಗಳ ಸುತ್ತಲ ಸ್ಯಾಂಪಲ್ ಸಂಗ್ರಹಿಸಲು ಹೇಳುತ್ತದೆ. ಆದರೆ ಭನವಾರಿ ತನ್ನ ಮೇಲಾದ ಅತ್ಯಾಚಾರದ ಬಗೆಗೆ ಹೇಳಿ, ತಕ್ಕ ಸ್ಯಾಂಪಲ್ ಸಂಗ್ರಹಿಸುವ ವೇಳೆಗೆ ೫೨ ತಾಸು ಮೀರಿ ಹೋಗಿತ್ತು.
ಹಣಕ್ಕಾಗಿ ಭನವಾರಿ ಸುಳ್ಳು ಕತೆ ಕಟ್ಟಿದ್ದಾಳೆಂದು ಅವಳ ಹಳ್ಳಿಯವರು, ಮತ್ತಿತರರು ಆಪಾದಿಸಿದರು. ಅವಳಿಗೆ ಸಹಾಯ ನೀಡಲು ನಿರಾಕರಿಸಿದರು. ೧೯೯೪ರಲ್ಲಿ ಆಪಾದಿತರು ಹಣ ಕೊಟ್ಟು ಕೇಸು ವಾಪಸ್ ತೆಗೆದುಕೊಳ್ಳಲು ಒತ್ತಾಯಿಸಿದರು. ಅದನ್ನು ನಿರಾಕರಿಸಿದ ಆಕೆ ತನ್ನ ಘನತೆ ಉಳಿಯಲು ಅವರೇ ಅತ್ಯಾಚಾರ ನಡೆಸಿದ್ದೆಂದು ಸಾಬೀತುಪಡಿಸಬೇಕಿದೆ ಎಂದು ಹೇಳಿ ಕೇಸು ಮುಂದುವರೆಸಿದಳು. ಹಣಕ್ಕೆ ರಾಜಿಯಾಗದ ಅವಳ ಜೊತೆ ಅವಳ ಮಗ-ಸೊಸೆ-ಬೀಗರು, ಸೋದರರೂ ಮಾತು ಬಿಟ್ಟು, ಎಲ್ಲ ಸಂಬಂಧಗಳನ್ನು ಕಡಿದುಕೊಂಡರು. ಅವಳ ಗಂಡ ಮಾತ್ರ ಕೊನೆಯತನಕ ಹೆಂಡತಿಯ ಬೆಂಗಾವಲಾಗಿ ನಿಂತ. ಅದನ್ನಾಕೆ ಈಗಲೂ ಕಣ್ತುಂಬಿ ನೆನೆಯುತ್ತಾಳೆ.
ಕೇಸು ನಡೆಯುತ್ತಿರುವಾಗ ಐದು ನ್ಯಾಯಾಧೀಶರು ಬದಲಾದರು. ಆರನೆಯವರು ೧೯೯೫ರಲ್ಲಿ ಭಯಾನಕ ತೀರ್ಪು ನೀಡಿ; ಮೇಲ್ಜಾತಿ ಪುರುಷರು ದಲಿತ ಭನವಾರಿಯ ಅತ್ಯಾಚಾರ ಮಾಡಿರಲಿಕ್ಕಿಲ್ಲ, ೫೨ ತಾಸಿನ ನಂತರ ವಿಚಾರಣೆಯಾಗಿರುವುದರಿಂದ ಆಕೆ ಹೇಳಿದ್ದು ಸುಳ್ಳಿರಬಹುದು, ಅವಳ ಗಂಡ ಸುಮ್ಮನೇ ನೋಡುತ್ತ ನಿಂತಿರಲು ಸಾಧ್ಯವಿಲ್ಲ, ತನ್ನ ಅಕ್ಕನ ಮಗನ ಜೊತೆಗೆ ಯಾರೂ ರೇಪ್ನಲ್ಲಿ ಭಾಗಿಯಾಗಲಾರರು ಎಂದೆಲ್ಲ ಉದ್ದನೆಯ ತೀರ್ಪು ಬರೆದು ಆರೋಪಿಗಳನ್ನು ಖುಲಾಸೆ ಮಾಡಿದರು.
ಬ್ರಿಟಿಷರು ಅತ್ಯಾಚಾರ ಕಾಯ್ದೆ ತಂದಾಗ ಪ್ರಕರಣದ ತೀರ್ಪುಗಳು ಕೋರ್ಟಿನಿಂದ ಕೋರ್ಟಿಗೆ ಬೇರೆಯಾಗಿರುತ್ತಿದ್ದವು. ಅದಕ್ಕೆ ಕಾರಣ ಮ್ಯಾಜಿಸ್ಟ್ರೇಟ್ಗಳು. ಕೆಲವರಂತೂ ಮೇಲ್ಜಾತಿ ಹೆಣ್ಣು ಕೆಳಜಾತಿ ಗಂಡಿನಿಂದ ಅತ್ಯಾಚಾರಕ್ಕೊಳಗಾದರೆ ಹೆಚ್ಚು ‘ಮಾನ ನಷ್ಟವಾಗುವುದಾಗಿಯೂ; ಕೆಳಜಾತಿ ಹೆಣ್ಣು ಮೊದಲೇ ಸಡಿಲ ನಡತೆಯವಳಾಗಿರುವ ಕಾರಣ ಮೇಲ್ಜಾತಿ ಗಂಡಿನಿಂದ ಅತ್ಯಾಚಾರಕ್ಕೊಳಗಾದರೆ ಮಾನನಷ್ಟ ಕಡಿಮೆ ಎಂದೂ ತೀರ್ಪು ಬರೆಯುತ್ತಿದ್ದರು. ೧೯ನೇ ಶತಮಾನದ ಮನಸ್ಥಿತಿ ೨೧ನೇ ಶತಮಾನದ ಹೊಸ್ತಿಲಲ್ಲೂ ಬದಲಾಗಲಿಲ್ಲವೆಂದು ಭನವಾರಿ ತೀರ್ಪು ತೋರಿಸಿತ್ತು. ಇವತ್ತಿಗೂ ಅತ್ಯಾಚಾರ-ಡೈವೋರ್ಸ್ ಕೇಸುಗಳ ಇತ್ಯರ್ಥ ಸಮಯದಲ್ಲಿ ಕೆಲವು ನ್ಯಾಯಾಧೀಶರೇ ‘ಉತ್ತಮ ಕುಲದ ಹೆಣ್ಣುಮಕ್ಕಳಂತೆ ಹೊಂದಿಕೊಂಡು ಹೋಗಲು ಸೂಚಿಸುತ್ತಾರೆ! ಒಟ್ಟಾರೆ ಈ ತೀರ್ಪು ಇದೆಲ್ಲವನ್ನು ಮುನ್ನೆಲೆಗೆ ತಂದು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಯಿತು. ರಾಜ್ಯ ಸರ್ಕಾರ ಈ ತೀರ್ಪಿನ ವಿರುದ್ಧ ಅಪೀಲು ಮಾಡಿತು. ಇಷ್ಟೆಲ್ಲ ಆಗಿ ೧೫ ವರ್ಷದ ನಂತರ ರಾಜಸ್ಥಾನ ಹೈಕೋರ್ಟ್ ೨೦೦೭ರಲ್ಲಿ ಒಮ್ಮೆ ಮಾತ್ರ ಈ ಕೇಸಿನ ಹಿಯರಿಂಗ್ ನಡೆಸಿದೆ. ಆ ವೇಳೆಗೆ ಇಬ್ಬರು ಆರೋಪಿಗಳು ಸತ್ತುಹೋಗಿದ್ದರು.
ಇದೇ ಸಮಯದಲ್ಲಿ ಭನವಾರಿಯ ಬದುಕು ಛಿದ್ರವಾಗಿತ್ತು. ಹೆಣ್ಣುಮಕ್ಕಳಿಗೆ ಗಂಡು ಹುಡುಕುವುದು ಕಷ್ಟವಾಯಿತು. ಮಗನನ್ನು ಕಾಲೇಜಿಗೆ ಕಳಿಸಿದರೆ ಆ ಮೇಲ್ಜಾತಿಯ ಹುಡುಗರು ಮಾರಣಾಂತಿಕವಾಗಿ ಹೊಡೆದರು. ಆತನಿಗೆ ಹೆಣ್ಣು ಸಿಗುವುದು ಕಷ್ಟವಾಯಿತು. ಭನವಾರಿ ಜಾತಿಯ ಜನ ಅವಳನ್ನು ‘ಕಳಂಕಿತೆ ಎಂದು ಘೋಷಿಸಿ ಜಾತಿಯಿಂದ ಹೊರಹಾಕಿದರು. ಪ್ರಧಾನಮಂತ್ರಿ ತತ್ಕಾಲ ಪರಿಹಾರವೆಂದು ನೀಡಿದ್ದ ೨೫ ಸಾವಿರ ಮೊತ್ತ ವಾಪಸ್ ಜಾತಿ ಸೇರಲು ಖರ್ಚಾಯಿತು. ನೀರಜ್ ಭಾನೋಟ್ ಪ್ರಶಸ್ತಿಯಾಗಿ ಬಂದ ಒಂದು ಲಕ್ಷ ಮೊತ್ತ ಮಹಿಳಾ ಸಬಲೀಕರಣಕ್ಕಾಗಿ ಬಳಸಬೇಕೆಂದು ಬ್ಯಾಂಕಿನಲ್ಲಿ ಭದ್ರವಾಗಿ ಕುಳಿತಿತು. ಅವಳ ಗಂಡ ಮಾಡಿದ್ದ ಮಡಕೆಯನ್ನು ಆ ಹಳ್ಳಿಯವರು ಕೊಳ್ಳುತ್ತಿರಲಿಲ್ಲ. ಮೂರು ಬಿಘಾ ಜಮೀನು ಸತತ ಬರದಿಂದ ಬಂಜರಾಗಿತ್ತು. ಆಗ ಅವಳ ಜೀವನಾಧಾರವಾಗಿದ್ದು ಒಂದು ಎಮ್ಮೆ ಮಾತ್ರ. ಇದೆಲ್ಲದರ ಹೊರತಾಗಿಯೂ ಆಕೆ ತಾನು ಸುಳ್ಳು ಹೇಳುತ್ತಿಲ್ಲ, ಒತ್ತಾಯ ಮಾಡಿ ಅವರನ್ನು ಮರುಳುಗೊಳಿಸಲಿಲ್ಲ ಎಂದು ಸಾಧಿಸಲು ಬಹಳ ಕಷ್ಟಪಟ್ಟಳು. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದರೆ ಹೊರಜಗತ್ತು ಹೇಗೆ ನಡೆಸಿಕೊಳ್ಳುತ್ತದೆ ಎಂಬ ಅರಿವಿದ್ದಾಗ್ಯೂ ತಪ್ಪಿತಸ್ಥರ ಶಿಕ್ಷೆಗಾಗಿ ಕೋರ್ಟುಕಚೇರಿ ಅಲೆದು ಹೋರಾಡಿದ ಅವಳ ಸ್ವಾಭಿಮಾನ ಎಷ್ಟೋ ಜನರಲ್ಲಿ ಧೈರ್ಯ ತುಂಬಿರಬಹುದು.
ಭನವಾರಿ ಅತ್ಯಾಚಾರಕ್ಕೊಳಗಾಗಿದ್ದು ತನ್ನ ಉದ್ಯೋಗದ ಕಾರಣಕ್ಕಾಗಿಯೇ. ಇದನ್ನು ಆಧಾರವನ್ನಾಗಿಟ್ಟುಕೊಂಡು ವಿಶಾಖ ಹಾಗೂ ಇನ್ನಿತರ ನಾಲ್ಕು ಸಂಘಟನೆಗಳು ರಾಜಸ್ಥಾನ ಸರ್ಕಾರ ಹಾಗೂ ಭಾರತ ಸರ್ಕಾರದ ವಿರುದ್ಧ ಕೋರ್ಟಿಗೆ ಹೋದವು. ಆ ಕೇಸಿನ ವಿಚಾರಣೆಯ ವೇಳೆ ಕೋರ್ಟ್ ‘ವಿಶಾಖ ಗೈಡ್ಲೈನ್ಸ್ ನಿರೂಪಿಸಿದ್ದು ಇಂದಿಗೂ ಅನುಸರಿಸಲಾಗುತ್ತಿದೆ. ೧೯೯೭ರ ತೀರ್ಪು ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳದ ವ್ಯಾಖ್ಯೆ ನೀಡಿ ಅದನ್ನು ನಿಭಾಯಿಸುವುದರ ಕುರಿತು ನೀತಿ ನಿಯಮಾವಳಿ ರೂಪಿಸಿತು. ಭನವಾರಿ ಕೇಸಿನಿಂದ ಎಚ್ಚೆತ್ತ ಸರ್ಕಾರ/ಸಂಘಟನೆಗಳು ಬಾಲ್ಯವಿವಾಹ ವಿರೋಧಿ ಆಂದೋಲನ ತೀವ್ರಗೊಳಿಸಿ ಈಗ ರಾಜಸ್ಥಾನದಲ್ಲಿ ಮೊದಲ ತಾಯಿಯ ಸರಾಸರಿ ವಯಸ್ಸು ೧೬ ವರ್ಷಕ್ಕೆ ಏರಿಕೆ ಆಗಿದೆ. ಅಷ್ಟರಮಟ್ಟಿಗೆ ಹಸುಳೆ ವಿವಾಹ ಕಮ್ಮಿಯಾಗಿದೆ. ಈ ಕೇಸಿನ ನಂತರ ರಾಜಸ್ಥಾನದಲ್ಲಿ ಅತ್ಯಾಚಾರ ಪ್ರಕರಣ ಕೇಸು ದಾಖಲಾಗುವುದು ಹೆಚ್ಚಾಗಿದೆ.
ಲೈಂಗಿಕ ಕಿರುಕುಳವನ್ನು ಅತ್ಯಾಚಾರಕ್ಕಿಂತ ಬೇರೆಯೇ ಆಗಿ ವ್ಯಾಖ್ಯಾನಿಸಿದ್ದೂ ಇದೇ ‘ವಿಶಾಖ ಕೇಸಿನಲ್ಲಿ. ಜಸ್ಟಿಸ್ ಜೆ.ಎಸ್.ವರ್ಮಾ, ಸುಜಾತಾ ಮನೋಹರ್ ಮತ್ತು ಬಿ.ಎನ್.ಕೃಪಾಲ್ ಅವರನ್ನೊಳಗೊಂಡ ಪೀಠವು ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಕೆಳಕಂಡ ವ್ಯಾಖ್ಯೆ ನೀಡಿತು. ಅಲ್ಲದೆ ಮಾನವ ಹಕ್ಕು ಮತ್ತು ಸಮಾನತೆಯ ಭಾಗವಾಗಿ ಲಿಂಗ ಸಮಾನತೆಯನ್ನು ಪರಿಭಾವಿಸುವ ಅವಶ್ಯಕತೆಯನ್ನು ಒತ್ತಿಹೇಳಿತು. ಲೈಂಗಿಕ ಕಿರುಕುಳದಲ್ಲಿ ನೊಂದವ್ಯಕ್ತಿಗೆ ಅದು ಇಷ್ಟವಿಲ್ಲದ ವರ್ತನೆಯಾಗಿತ್ತು ಎನ್ನುವುದೇ ಮುಖ್ಯವಾಗಿದ್ದು ಆರೋಪಿಯ ಉದ್ದೇಶ ಗಮನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ಕಿರುಕುಳ ನೀಡಿದಾತ ನೊಂದವ್ಯಕ್ತಿಯ ಮೇಲೆ ಮಾಡಿದ ಬಲ ಪ್ರದರ್ಶನ ಪ್ರಶ್ನಾರ್ಹವಾಗಿರುತ್ತದೆ. ಮಹಿಳೆಯ ಮರ್ಯಾದೆಗೆ ಕುಂದು ತರುವಂತಹ, ಅವಳ ವೈಯಕ್ತಿಕತೆಗೆ ಭಂಗ ತರುವಂತಹ ಅಸಭ್ಯ ನಡವಳಿಕೆ/ ಅಸಭ್ಯ ಪದ/ಸನ್ನೆ/ಹಾಡುಗಳ ಬಳಕೆ ಇವೆಲ್ಲ ಮಹಿಳೆ ಇಷ್ಟಪಡದ ವರ್ತನೆಗಳಾಗಿದ್ದಲ್ಲಿ ಅವು ಶಿಕ್ಷಾರ್ಹವಾಗಿರುತ್ತವೆ.
ಲೈಂಗಿಕ ಕಿರುಕುಳವೆಂದರೆ ಪ್ರತ್ಯಕ್ಷ ಅಥವಾ ಪರೋಕ್ಷವಾದ, ಇಷ್ಟಪಡದ ಕೆಳಗಿನ ವರ್ತನೆಗಳು:
೧. ಲೈಂಗಿಕ ಭಾವದ ಅಭಿಪ್ರಾಯ ವ್ಯಕ್ತಪಡಿಸುವುದು
೨. ದೈಹಿಕ ಸಂಪರ್ಕ ಮತ್ತು ಮುಂದುವರಿಕೆ
೩. ನಗ್ನ ಚಿತ್ರ ಪ್ರದರ್ಶನ
೪. ಲೈಂಗಿಕ ಅನುಕೂಲಗಳಿಗೆ ಒತ್ತಾಯಿಸುವುದು;
೫. ದೈಹಿಕ/ಮೌಖಿಕ/ಅಮೌಖಿಕ ಲೈಂಗಿಕ ಸನ್ನೆ ಮಾಡುವುದು
ಉದ್ಯೋಗದಾತ ಅಥವಾ ಉದ್ಯೋಗದ ಜವಾಬ್ದಾರಿ ಹೊತ್ತ ವ್ಯಕ್ತಿ/ಸಂಸ್ಥೆಯು ಸರ್ಕಾರಿ/ಖಾಸಗಿ/ಸಂಘಟಿತ ಕ್ಷೇತ್ರದಲ್ಲಿ ನಿಯಮಿತ ಸಂಬಳ ಪಡೆಯುವ/ಗೌರವಧನ ಪಡೆಯುವ/ಸ್ವಯಂಸೇವಕ ಉದ್ಯೋಗಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ರಕ್ಷಣೆ ನೀಡಲು ಹೊಣೆಗಾರರಾಗಿರುತ್ತಾರೆ. ದೌರ್ಜನ್ಯ ತಡೆಗೆ ಉದ್ಯೋಗದಾತರು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ನೀತಿ ನಿಯಮಾವಳಿಗಳು ಈ ರೀತಿ ಇವೆ:
೧. ಎಲ್ಲ ಸರ್ಕಾರಿ/ಖಾಸಗಿ ಉದ್ಯೋಗದಾತರು ಉದ್ಯೋಗದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಯಲು ಬಾಧ್ಯಸ್ಥರಾಗಿದ್ದು ಅದಕ್ಕಾಗಿ ಅವರು,
ಲೈಂಗಿಕ ಕಿರುಕುಳ ತಡೆಯಲು ಮೇಲ್ಕಾಣಿಸಿದ ವ್ಯಾಖ್ಯೆಯನ್ನು ಪ್ರಚಾರ ಮಾಡಬೇಕು.
ಸರ್ಕಾರಿ/ಸಾರ್ವಜನಿಕ ನೌಕರರ ನಡವಳಿಕೆ ನೀತಿ ನಿಯಮಾವಳಿಗಳಲ್ಲಿ ಲೈಂಗಿಕ ಕಿರುಕುಳ ನಿಷೇಧ ಹಾಗೂ ಅದಕ್ಕೆ ನೀಡುವ ದಂಡ/ಶಿಕ್ಷೆ ಒಳಗೊಂಡಿರಬೇಕು.
ಖಾಸಗಿ ಉದ್ಯೋಗದಾತರೂ ನಡವಳಿಕೆ ನಿಯಮಾವಳಿಗಳಲ್ಲಿ ಲೈಂಗಿಕ ಕಿರುಕುಳ ನಿಷೇಧ ಸೇರಿಸಿಕೊಳ್ಳಬೇಕು.
ಕೆಲಸದ ಸ್ಥಳದಲ್ಲಿ ವಿರಾಮ, ಆರೋಗ್ಯವೂ ಸೇರಿದಂತೆ ಉತ್ತಮ ವಾತಾವರಣ ಇದ್ದು ಮಹಿಳೆ ಪ್ರತಿಕೂಲ ಎಂದು ಭಾವಿಸದಂತೆ ಇರಬೇಕು.
೨. ಹಾಗೇನಾದರೂ ಲೈಂಗಿಕ ಕಿರುಕುಳದ ಆರೋಪ ಬಂದಲ್ಲಿ ಉದ್ಯೋಗದಾತ ಸೂಕ್ತ ಕ್ರಮ ಕೈಗೊಂಡು ತಕ್ಕ ಅಥಾರಿಟಿಗೆ ದೂರು ನೀಡಬೇಕು.
೩. ನೊಂದ ವ್ಯಕ್ತಿಯು ಆರೋಪಿಗಳ ಅಥವಾ ತಮ್ಮ ವರ್ಗಾವಣೆ ಬಯಸಿದಲ್ಲಿ ಅದಕ್ಕೆ ಅವಕಾಶ ಇರಬೇಕು.
ಲೈಂಗಿಕ ಕಿರುಕುಳದ ದೂರು ಬಂದಲ್ಲಿ ಅದನ್ನು ನಿಭಾಯಿಸಲು ಉದ್ಯೋಗದಾತರು:
ದೂರು ಸಮಿತಿ ಇಟ್ಟಿರಬೇಕು. ಮಹಿಳೆಯೇ ಅದರ ಮುಖ್ಯಸ್ಥೆಯಾಗಿರಬೇಕು. ಅರ್ಧ ಸದಸ್ಯರು ಮಹಿಳೆಯರೇ ಇರಬೇಕು.
ಸಮಿತಿಯಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಕೆಲಸ ಮಾಡುವ ಯಾವುದಾದರೂ ಸರ್ಕಾರೇತರ ಸಂಘಟನೆ ಅಥವಾ ಇನ್ನಿತರ ಸಂಘಟನೆ ಇರಬೇಕು.
ಪ್ರೊಸೀಜರ್ ಕಾಲಮಿತಿಗೊಳಪಡಬೇಕು.
ಗೌಪ್ಯತೆ ಕಾಪಾಡಬೇಕು.
ದೂರಿತ್ತ ವ್ಯಕ್ತಿ ಅಥವಾ ಅವರ ಪರವಾದ ಸಾಕ್ಷಿ ತಾರತಮ್ಯಕ್ಕೊಳಗಾಗದಂತೆ, ಬಲಿಪಶುವಾಗದಂತೆ ನೋಡಿಕೊಳ್ಳಬೇಕು.
ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ಈ ಕುರಿತು ವಾರ್ಷಿಕ ವರದಿ ಸಲ್ಲಿಸಬೇಕು.
ಅಲ್ಲದೇ,
ಮಹಿಳಾ ಉದ್ಯೋಗಿಗಳ ಹಕ್ಕುಗಳು ಎಲ್ಲರಿಗೂ ತಿಳಿಯುವಂತೆ ಸೂಕ್ತ ಸ್ಥಳದಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು.
ಉದ್ಯೋಗಿಯು ಹೊರಗಿನವರಿಂದ/ಮೂರನೆಯ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಉದ್ಯೋಗದಾತ ಸಹಾಯ ಮಾಡಬೇಕು
ನೌಕರರ ಮೀಟಿಂಗುಗಳಲ್ಲಿ ಈ ವಿಷಯ ಚರ್ಚೆಯಾಗಬೇಕು
ಇವು ಖಾಸಗಿ ಕ್ಷೇತ್ರಕ್ಕೂ ಅನ್ವಯಿಸುತ್ತವೆ ಎಂದು ಕೇಂದ್ರ/ರಾಜ್ಯ ಸರ್ಕಾರಗಳು ಸ್ಪಷ್ಟಪಡಿಸಬೇಕು.
ವಿಶಾಖ ಕೇಸಿನಲ್ಲಿ ರೂಪಿಸಿದ ನೀತಿನಿಯiಗಳಂತೆ ಎ. ಸಿ. ಚೋಪ್ರಾ ಕೇಸಿನಲ್ಲಿ ಕೋರ್ಟ್ ತೀರ್ಪು ನೀಡಿತು. ದೆಹಲಿಯ ಪ್ರಮುಖ ರಫ್ತು ಸಂಸ್ಥೆಯ ಮೇಲ್ದರ್ಜೆಯ ಉದ್ಯೋಗಿಯೊಬ್ಬ ಕೆಳದರ್ಜೆ ನೌಕರಳೊಬ್ಬಳಿಗೆ ಉದ್ಯೋಗ ಸ್ಥಳದಲ್ಲಿ ನೀಡಿದ ಲೈಂಗಿಕ ಕಿರುಕುಳದ ಕೇಸಿನಲ್ಲಿ ನೌಕರಳ ಪರವಾಗಿ ತೀರ್ಪು ಬಂದಿತು.
ಕಾನೂನಿನ ರಕ್ಷಣೆ ಇದ್ಯಾಗ್ಯೂ ಎಲ್ಲ ಕೇಸುಗಳಲ್ಲೂ ನೊಂದವರಿಗೆ ಶಿಕ್ಷೆಯಾಗಿ ಆಪಾದಿತರು ಶಿಕ್ಷೆ ಅನುಭವಿಸುವರೆಂದು ಹೇಳಬರುವುದಿಲ್ಲ. ಅಪೂರ್ಣ ಅಸಮರ್ಪಕ ತನಿಖೆ, ಲಿಂಗಾಧಾರಿತ ಪೂರ್ವಗ್ರಹ, ಪೊಲೀಸರ ಅದಕ್ಷತೆ, ಎಫ್ಐಆರ್ ದಾಖಲಿಸಲು/ಸರಿಯಾಗಿ ದಾಖಲಿಸಲು ನಿರಾಕರಿಸುವುದು/ವಿಫಲವಾಗುವುದು, ಸಣ್ಣ ಕಾರಣಗಳಿಗೆಲ್ಲ ಕೇಸು ಮುಂದೂಡುತ್ತ ದಶಕಗಟ್ಟಲೆ ವಿಳಂಬ ಮಾಡುವುದು, ಸಾರ್ವಜನಿಕರ ಎದುರು ನೊಂದ ಮಹಿಳೆ ಹೇಳಿಕೆ ನೀಡುವಂತೆ ಮಾಡುವುದು, ವಿರೋಧಿ ವಕೀಲರು ಇರುಸುಮುರುಸಾಗುವ ಪ್ರಶ್ನೆ ಕೇಳಿ ಉತ್ತರಿಸಲು ತೊಡಕಾಗುವುದು ಇವೇ ಮೊದಲಾದವು ನ್ಯಾಯದಾನ ಸಾಧ್ಯವಾಗದೇ ಇರಲು ಕಾರಣವಾಗಿವೆ. ಲೈಂಗಿಕ ಕಿರುಕುಳವಿರಲಿ, ಅತ್ಯಾಚಾರ ಪ್ರಕರಣವಿರಲಿ ಹೆಚ್ಚಿನ ಕೇಸುಗಳಲ್ಲಿ ಆರೋಪಿಯು ಸಣ್ಣ ಮೊತ್ತದ ದಂಡ, ಕೆಲ ವರ್ಷ ಜೈಲು ಅಥವಾ ಹೆಚ್ಚೆಂದರೆ ದೊಡ್ಡ ಮೊತ್ತದ ಹಣವನ್ನು ಕೋರ್ಟ್ ಹೊರಗಿನ ಸೆಟಲ್ಮೆಂಟಿಗೆ ನೀಡಿ ಕೆಲದಿನ ಜೈಲಲ್ಲಿದ್ದು ಪರಾರಿಯಾಗುತ್ತಾನೆ. ಆದರೆ ಬಲಿಪಶುವನ್ನು ಮಾನವೀಯತೆಯ ಸೋಂಕಿಲ್ಲದೆ ಹಿಂಸಿಸಬಲ್ಲ ವ್ಯಕ್ತಿ ಸಾಂಕೇತಿಕ ಜೈಲುವಾಸದಿಂದ, ದಂಡದ ಹಣ ನೀಡುವುದರಿಂದ ಬದಲಾಗುವನೆಂದು ಭಾವಿಸಬಹುದೆ?
ನ್ಯಾಯಾಧೀಶರು-ವಕೀಲರು-ಪೋಲೀಸರು ಈ ಮೂವರೂ ಪುರುಷ ಪ್ರಾಬಲ್ಯದ, ಜೊತೆಗೆ ಅಷ್ಟೇ ಪೂರ್ವಗ್ರಹದಿಂದ ತುಂಬಿದ ಮನಸ್ಸುಗಳಿರುವ ನ್ಯಾಯ ವ್ಯವಸ್ಥೆಯ ಸ್ಥಂಭಗಳು. ಈ ದೇಶದ ಸಾಮಾನ್ಯರಲ್ಲಿ ಸಾಮಾನ್ಯ ಮಹಿಳೆಯೂ ನ್ಯಾಯ ಪಡೆಯಬೇಕಾದರೆ ನ್ಯಾಯದಾನ ವ್ಯವಸ್ಥೆಯ ಮೂಲ ಮನಸ್ಥಿತಿಯೂ ಬದಲಾಗಬೇಕು, ಮಹಿಳೆಯ ಕುರಿತ ಒಟ್ಟಾರೆ ಸಮಾಜದ ಧೋರಣೆಯೂ ಬದಲಾಗಬೇಕು.